ಹುಮನಾಬಾದ
	ಭಾರತದ ಕರ್ನಾಟಕ ರಾಜ್ಯದ ಬೀದರ್ ಜಿಲ್ಲೆಯ ಒಂದು ತಾಲ್ಲೂಕು ಮತ್ತು ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕಿನ ಉತ್ತರದಲ್ಲಿ ಭಾಲ್ಕಿ, ಪೂರ್ವದಲ್ಲಿ ಬೀದರ್ ತಾಲ್ಲೂಕುಗಳೂ ಮತ್ತು ಆಂಧ್ರಪ್ರದೇಶವೂ ದಕ್ಷಿಣದಲ್ಲಿ ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ಮತ್ತು ಗುಲ್ಬರ್ಗ ತಾಲ್ಲೂಕುಗಳೂ ಪಶ್ಚಿಮದಲ್ಲಿ ಬಸವಕಲ್ಯಾಣ ತಾಲ್ಲೂಕೂ ಸುತ್ತುವರಿದಿವೆ. ಧುಬುಲಗುಂಡಿ, ಹುಮನಾಬಾದ, ಹಳ್ಳಿಖೇಡ (ಬಿ), ಚಿಟಗುಪ್ಪ, ನೀರ್ಣಾ, ಬಿಮಲಖೇಡ ಹೋಬಳಿಗಳು. ಎರಡು ಪಟ್ಟಣಗಳು ಮತ್ತು 87 ಗ್ರಾಮಗಳಿರುವ ಈ ತಾಲ್ಲೂಕಿನ ವಿಸ್ತೀರ್ಣ 988.2 ಚ.ಕಿಮೀ. ಜನಸಂಖ್ಯೆ 2,94,817. 

	ತಾಲ್ಲೂಕು ಭೋಟುಕಲ್ಲಿನ ಮಿಶ್ರಣವಿರುವ ಭೂಮಿಯಿಂದಲೂ ಜಂಬಿಟ್ಟಿಗೆಯ ಪ್ರದೇಶದಿಂದಲೂ ಕೂಡಿದೆ. ಭೂಮಿ ಕೆಂಪುಮಿಶ್ರಿತ ಮಣ್ಣಿನಿಂದ ಕೂಡಿದ್ದು ಕೆಲವು ಕಡೆಗಳಲ್ಲಿ ಕಪ್ಪುಮಣ್ಣಿನ ಭೂಮಿಯಿದೆ. ತಾಲ್ಲೂಕಿನ ಮಾಣಿಕನಗರನಾಲಾ ಕಾರಂಜಾ ನದಿಯ ಉಪನದಿ. ಇದು ಬಸವಕಲ್ಯಾಣದ ಗುಣತೀರ್ಥವಾಡಿಯಲ್ಲಿ ಹುಟ್ಟುವುದು. ಈ ನಾಲೆಗೆ ಹುಮನಾಬಾದ-ಹುಡುಗಿ ಮಧ್ಯೆ ಕಟ್ಟೆ ನಿರ್ಮಿಸಿದೆ. ಹಳ್ಳಿಖೇಡ ನಾಲಾ ಬಸವಕಲ್ಯಾಣ ತಾಲ್ಲೂಕಿನ ಗೊರ್ಟಾ(ಬಿ) ಗ್ರಾಮದ ಬಳಿ ಹುಟ್ಟಿ ಹುಮನಾಬಾದ ತಾಲ್ಲೂಕಿನ ಮಾರ್ಕಲ್ಲು ಗ್ರಾಮದ ಬಳಿ ಮಾಣಿಕನಗರನಾಲಾವನ್ನು ಕೂಡಿಕೊಳ್ಳುವುದು. ತಾಲ್ಲೂಕಿನಲ್ಲಿ ಒಟ್ಟು 6,839.3 ಹೆಕ್ಟೇರುಗಳ ಸಾಮಾನ್ಯ ಅರಣ್ಯವಿದೆ. ಬೇಸಗೆಯಲ್ಲಿ ಸ್ವಲ್ಪ ಬಿಸಿಲಿನ ತಾಪ ಹೆಚ್ಚಾದರೂ ಹವೆ ಸಮಶೀತೋಷ್ಣವೆನ್ನಬಹುದು. ವಾರ್ಷಿಕ ಸರಾಸರಿ ಮಳೆ 894.26 ಮಿ.ಮೀ. ಬಾವಿ ನೀರಾವರಿ ಹೆಚ್ಚೆನ್ನಬಹುದು. ಸೇಂಗಾ, ಜೋಳ, ಸಜ್ಜೆ, ಗೋದಿ, ಕಡಲೆ, ಕಬ್ಬು, ತೊಗರಿ ಮುಂತಾದವುಗಳನ್ನು ಬೆಳೆಯುತ್ತಾರೆ. ಪಶುಪಾಲನೆಯುಂಟು.

	ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಯೂ ಈ ಕಾರ್ಖಾನೆ ಪಕ್ಕದಲ್ಲೆ ಇಂಡಿಯ ಬ್ರಿವರಿ ಆಂಡ್ ಡಿಸ್ಟಿಲರಿ ಕಾರ್ಖಾನೆಯೂ ಇದೆ. ಚಿಟಗುಪ್ಪದಲ್ಲಿ ಖಂಡಸಾರಿ ಸಕ್ಕರೆ ಕಾರ್ಖಾನೆ, ಮರ ಕೊಯ್ಯುವ ಕಾರ್ಖಾನೆ ಮುಂತಾದವುಗಳಿವೆ. ತಾಲ್ಲೂಕಿನಲ್ಲಿ ಕೈಮಗ್ಗದ ಬಟ್ಟೆ ತಯಾರಿಕೆ ಹೆಚ್ಚು. ಕೆಲವೊಂದು ರಾಸಾಯನಿಕ ಮತ್ತು ತಾಂತ್ರಿಕ ಕೈಗಾರಿಕಾ ಘಟಕಗಳಿದ್ದು, ತಾಲ್ಲೂಕು ಕೈಗಾರಿಕೆಯಲ್ಲಿ ಮುಂದುವರಿಯುವ ಪ್ರಯತ್ನ ಸಾಗಿದೆ. ತಾಲ್ಲೂಕಿನ ವಾಣಿಜ್ಯ-ಕೈಗಾರಿಕೆಗಳ ಅಭಿವೃದ್ಧಿಗೆ ಸಹಾಯಕವಾಗಿ ವಾಣಿಜ್ಯ ಸಹಕಾರಿ ಮತ್ತು ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕುಗಳೂ ಒಂದು ನಿಯಂತ್ರಿತ ಮಾರುಕಟ್ಟೆಯೂ ಇವೆ.

	ತಾಲ್ಲೂಕಿನಲ್ಲಿ ಹೈದರಾಬಾದು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಗುಲ್ಬರ್ಗ-ಬೀದರ್ ರಾಜ್ಯ ಹೆದ್ದಾರಿ ಹಾದುಹೋಗಿವೆ. ಸುತ್ತಲ ತಾಲ್ಲೂಕು ಪಟ್ಟಣಗಳಿಗೆ ಇಲ್ಲಿಂದ ಮಾರ್ಗಸಂಪರ್ಕಗಳಿವೆ. ಹುಮನಾಬಾದಿಗೆ ಈಶಾನ್ಯದಲ್ಲಿ 8 ಕಿ.ಮೀ. ದೂರದಲ್ಲಿರುವ ಜಲಸಂಗ್ವಿ ಗ್ರಾಮದ ಕೆರೆಯ ಬಳಿ ಹೊಯ್ಸಳ ಶೈಲಿಯ ಜೀರ್ಣ ದೇವಾಲಯವಿದೆ. ಈ ಗುಡಿಯ ಹೊರಗೋಡೆಯ ಮೇಲೆ ಒಂದು ಸುಂದರ ಸ್ತ್ರೀಶಿಲ್ಪವಿದ್ದು ಅದು ಒಂದು ಓಲೆಯನ್ನು ಬರೆಯುತ್ತಿರುವಂತೆ ಕೆತ್ತಿದೆ. ಆ ಓಲೆಯೇ ಒಂದು ಶಾಸನ. ಗ್ರಾಮದಲ್ಲಿ ಮಹಾದೇವನ ದೇವಾಲಯವಿದೆ. ಹುಮನಾಬಾದಿನ ವಾಯವ್ಯಕ್ಕೆ ಎರಡು ಕಿ.ಮೀ. ದೂರದಲ್ಲಿರುವ ಮಾಣಿಕನಗರ ಗ್ರಾಮದಲ್ಲಿ ಮಾಣಿಕಪ್ರಭು ದೇವಾಲಯವಿದೆ. ಪ್ರತಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಇಲ್ಲಿಯ ಜಾತ್ರೆಗೆ ಸಾವಿರಾರು ಮಂದಿ ಸೇರುವರು. ಹುಮನಾಬಾದಿನ ಪೂರ್ವಕ್ಕೆ 5 ಕಿ.ಮೀ. ದೂರದಲ್ಲಿ ಸೋಲಾಪುರ-ಹೈದರಾಬಾದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹುಡುಗಿ ಗ್ರಾಮವಿದೆ. ಇಲ್ಲಿ ಯಂಕಮ್ಮ ಮತ್ತು ಕರಿಬಸಯ್ಯ ದೇವಾಲಯಗಳಿವೆ. ಇಲ್ಲಿ ಪ್ರತಿ ಮೇ ತಿಂಗಳಲ್ಲಿ ಜಾತ್ರೆ ಸೇರುವುದು. ಹುಮನಾಬಾದಿಗೆ ಈಶಾನ್ಯದಲ್ಲಿ 16 ಕಿ.ಮೀ. ದೂರದಲ್ಲಿರುವ ಹಳ್ಳಿಖೇಡ (ಬಿ) ಹೋಬಳಿಯ ಆಡಳಿತ ಕೇಂದ್ರ. ಈ ಗ್ರಾಮದ ನಾಗನಾಥ ದೇವಾಲಯ ಬಹು ಪ್ರಸಿದ್ಧವಾದುದು.

	ಹುಮನಾಬಾದಿಗೆ ಆಗ್ನೇಯದಲ್ಲಿರುವ ಚಾಂಗಲೇರ ಗ್ರಾಮ ಚಿಟಗುಪ್ಪಿಗೆ ಆಗ್ನೇಯದಲ್ಲಿ 21 ಕಿಮೀ ದೂರದಲ್ಲಿದೆ. ಗ್ರಾಮದಲ್ಲಿ ವೀರಭದ್ರ ದೇವಾಲಯವಿದೆ. ಇಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳಲ್ಲಿ ಎರಡು ದಿನಗಳ ಜಾತ್ರೆ ನಡೆಯುವುದು. ಹುಮನಾಬಾದಿಗೆ ಆಗ್ನೇಯದಲ್ಲಿ 15 ಕಿಮೀ ದೂರದಲ್ಲಿರುವ ಚಿಟಗುಪ್ಪ ಹೋಬಳಿ ಆಡಳಿತ ಕೇಂದ್ರ ಪಟ್ಟಣ. ಇದು ತಾಲ್ಲೂಕಿನ ಎರಡನೆಯ ಮುಖ್ಯ ಪಟ್ಟಣ ಮತ್ತು ವ್ಯಾಪಾರ ಕೇಂದ್ರ.     *

	ಹುಮನಾಬಾದ ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಪಟ್ಟಣ. ಬೀದರ್‍ನ ನೈಋತ್ಯಕ್ಕೆ 58 ಕಿ.ಮೀ. ದೂರದಲ್ಲಿ ಹೈದರಾಬಾದು-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಜನಸಂಖ್ಯೆ 60,743.

	ವ್ಯಾಪಾರ ಕೇಂದ್ರವಾದ ಈ ಪಟ್ಟಣದ ಮುಖಾಂತರ ಗುಲ್ಬರ್ಗ-ಬೀದರ್ ರಾಜ್ಯ ಹೆದ್ದಾರಿ ಹಾದುಹೋಗಿದೆ. ಹುಮನಾಬಾದಿಗೆ ವಾಯವ್ಯದಲ್ಲಿ 2 ಕಿ.ಮೀ. ದೂರದಲ್ಲಿರುವ ಮಾಣಿಕ ನಗರದಲ್ಲಿ ವಿದ್ಯಾಕೇಂದ್ರವಿದ್ದು ಸಂಸ್ಕøತ ಕಾಲೇಜು, ಗ್ರಾಮಾಂತರ ತಾಂತ್ರಿಕ ತರಬೇತಿ ಕೇಂದ್ರ, ಆಯುರ್ವೇದ ಸಂಶೋಧನ ಕೇಂದ್ರ ಮುಂತಾದವುಗಳಿವೆ. ಪಟ್ಟಣದಲ್ಲಿ ಶಾಲಾಕಾಲೇಜುಗಳಿದ್ದು ವಿದ್ಯಾಭ್ಯಾಸಕ್ಕೆ ಅನುಕೂಲವಿದೆ. 

	ಚಾಳುಕ್ಯ ದೊರೆ ಜಯಸಿಂಹ ಈ ಪಟ್ಟಣವನ್ನು 1040ರಲ್ಲಿ ಕಟ್ಟಿಸಿದನೆಂದೂ ಇದನ್ನು ಜಯಸಿಂಹಪುರವೆಂದು ಕರೆಯುತ್ತಿದ್ದರೆಂದೂ ಹೇಳುವರು. ಇಲ್ಲಿರುವ ವೀರಭದ್ರ ದೇವಾಲಯ ಪೂರ್ವಾಭಿಮುಖವಾಗಿದೆ. ಗರ್ಭಗೃಹದ ಪಕ್ಕದಲ್ಲಿ ಭದ್ರಕಾಳಿ ಮತ್ತು ನಂದಿಕೇಶ್ವರ ಗುಡಿಗಳಿವೆ. ಗರ್ಭಗೃಹದ ಶಿಖರದಲ್ಲಿ ಶಿವನ ಇಪ್ಪತ್ತೆಂಟು ಲೀಲೆಗಳ, ವಿಷ್ಣುವಿನ ದಶಾವತಾರ ಮತ್ತು ಪುರಾಣಗಳ ಕಥೆಗಳಿವೆ. ದೇವಾಲಯದ ಬಳಿ ಸುಂದರವಾದ ಕೆರೆಯಿದೆ. ಇಲ್ಲಿ ಪ್ರತಿ ಜನವರಿ ತಿಂಗಳಲ್ಲಿ ನಡೆಯುವ ವೀರಭದ್ರೇಶ್ವರ ಜಾತ್ರೆ ಪ್ರಸಿದ್ಧ.

													(ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ